ದೆಹಲಿ: ಸಂವಿಧಾನದ ವಿಧಿ 341ರ ಅಡಿ ಪ್ರಕಟಿಸಲಾದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆ ಮಾಡುವ ಅಧಿಕಾರ ರಾಜ್ಯ ಸರ್ಕಾರ ಅಥವಾ ಯಾವುದೇ ಪ್ರಾಧಿಕಾರಕ್ಕಿಲ್ಲ. ಈ ಅಧಿಕಾರ ಸಂಸತ್ತಿಗೆ ಮಾತ್ರ ಇರುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪರಿಶಿಷ್ಟ ಜಾತಿಗಳ ಪಟ್ಟಿಗೆ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಜಾತಿಯನ್ನು ಸೇರ್ಪಡೆ ಮಾಡಿದ್ದ ಬಿಹಾರ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಡಾ. ಭೀಮ್ ರಾವ್ ಅಂಬೇಡ್ಕರ್ ವಿಚಾರ್ ಮಂಚ್ ಬಿಹಾರ್ ಸಂಘಟನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್ ನಾಥ್ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ತಾಂತ್ವಿ/ತಂತ್ವಾ ಸಮುದಾಯವನ್ನು ಎಸ್ಸಿ ಜಾತಿಗಳ ಪಟ್ಟಿಯಲ್ಲಿ ಬರುವ ಪಾನ್/ಸವಾಸಿ ಜಾತಿಯೊಂದಿಗೆ ವಿಲೀನಗೊಳಿಸುವ ಮೂಲಕ ರಾಜ್ಯ ಸರ್ಕಾರ ಎಸ್ಸಿ ಸಮುದಾಯವನ್ನು ವಂಚಿಸುವ ಪ್ರಯತ್ನ ಮಾಡಿದೆ. ಇದೊಂದು ಗಂಭೀರ ವಿಚಾರವಾಗಿದ್ದು, ರಾಜ್ಯದ ದೃಷ್ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಬಿಹಾರ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದೆ.
ಇದೇ ವೇಳೆ, ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿರುವ ತಾಂತಿ/ತಂತ್ವಾ ಸಮುದಾಯಕ್ಕೆ ಈಗಾಗಲೇ ಪರಿಶಿಷ್ಟ ಜಾತಿ ಅಡಿ ನೀಡಿರುವ ಸೌಲಭ್ಯಗಳನ್ನು ಕಿತ್ತುಕೊಳ್ಳಬಾರದು. ಬದಲಿಗೆ ಇಬಿಸಿ (ಅತ್ಯಂತ ಹಿಂದುಳಿದ ವರ್ಗ) ಅಡಿಯಲ್ಲಿ ಒದಗಿಸಿಕೊಡಬೇಕು. ಹಾಗೆಯೇ ಎಸ್ಸಿ ಕೋಟಾದಡಿ ನೀಡಿರುವ ಸೌಲಭ್ಯ/ಹುದ್ದೆಗಳನ್ನು ಎಸ್ಸಿ ವರ್ಗಕ್ಕೆ ಹಿಂದಿರುಗಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸುವ ಮೂಲಕ ಫಲಾನುಭವಿಗಳ ಮೇಲೆ ಸುಪ್ರೀಂ ತೀರ್ಪು ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಂಡಿದೆ.
ಇನ್ನು ಕಾನೂನಾತ್ಮಕ ವಿಚಾರಗಳನ್ನು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್, ಎಸ್ಸಿ ಪಟ್ಟಿಯನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. ಸಂವಿಧಾನದ ವಿಧಿ 341(2) ಪರಿಶಿಷ್ಟ ಜಾತಿಯ ಪಟ್ಟಿಯನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಸಂಸತ್ತಿಗಷ್ಟೇ ನೀಡಿದೆ. ಈ ಅಧಿಕಾರವನ್ನು ರಾಜ್ಯ ಅಥವಾ ಬೇರಾವುದೇ ಪ್ರಾಧಿಕಾರ ತಿದ್ದುಪಡಿ ಮಾಡಲು ಅಧಿಕಾರ ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ಅತ್ಯಂತ ಹಿಂದುಳಿದ ವರ್ಗ ಎಂದು ಗುರುತಿಸಿರುವ ತಾಂತಿ/ತಂತ್ವಾ ಸಮುದಾಯವನ್ನು ಬಿಹಾರ ರಾಜ್ಯ ಸರ್ಕಾರ 2015ರ ಜುಲೈನಲ್ಲಿ ಪರಿಶಿಷ್ಟ ಜಾತಿಯೊಂದಿಗೆ ವಿಲೀನಗೊಳಿಸಿತ್ತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿತ್ತು. ರಾಜ್ಯ ಸರ್ಕಾರದ ನಿರ್ಣಯವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸಿರಲಿಲ್ಲ. ಬದಲಿಗೆ ಸರ್ಕಾರದ ನಿರ್ಣಯ ಎತ್ತಿ ಹಿಡಿದಿತ್ತು. ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
(Civil Appeal No. 18802 of 2017)