ಬೆಂಗಳೂರು: ವಿದ್ಯಾರ್ಥಿಯೊಬ್ಬರಿಗೆ ಮ್ಯಾನೇಜ್ಮೆಂಟ್ ಕೋಟಾದಡಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ₹2.12 ಕೋಟಿ ಹಣ ಪಡೆದು ವಂಚಿಸಿದ ಆರೋಪಿಯ ವಿರುದ್ಧದ ಎಫ್ಐಆರ್ ಅನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟು ಕೊಡಿಸುವುದಾಗಿ ತಿಳಿಸಿ 2.12 ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ನಗರದ ವಿಶ್ವೇಶ್ವರಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ಪ್ರಕರಣದ ಎರಡನೇ ಆರೋಪಿ ವಿರೂಪಾಕ್ಷಪ್ಪ ಎಂಬುವರು ಅರ್ಜಿ ಸಲ್ಲಿಸಿದ್ದರು.
ಜುಲೈ 15ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ದಲ್ಲಾಳಿಗಳು ವೈದ್ಯಕೀಯ ಸೀಟು ಕೊಡಿಸುವುದಾಗಿ ಜನರಿಗೆ ನಂಬಿಸಿ ಮೋಸ ಮಾಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು. ಅರ್ಜಿದಾರರ ವಿರುದ್ಧ ಎಫ್ಐಆರ್ ರದ್ದುಪಡಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿತು. ಇದರಿಂದ ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ಹಿಂಪಡೆದರು.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿಯನ್ನು ಆಕ್ಷೇಪಿಸಿದ ಸರ್ಕಾರಿ ವಕೀಲರು, ಎಫ್ಐಆರ್ ರದ್ದುಗೊಳಿಸಲು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಮೇಲಿನ ಆರೋಪ ಗಂಭೀರವಾಗಿದ್ದು, ಅವರ ಮನವಿ ಪುರಸ್ಕರಿಸಬಾರದು ಎಂದು ಕೋರಿದರು.
ಅರ್ಜಿದಾರರ ಪರ ವಕೀಲರು ಉತ್ತರಿಸಿ, ”ಪ್ರಕರಣದಲ್ಲಿ ಅರ್ಜಿದಾರ ಎರಡನೇ ಆರೋಪಿಯಾಗಿದ್ದಾನೆ. ಪ್ರಕರಣದ ಅಂಶಗಳನ್ನು ಓದಿದರೆ, ದೂರುದಾರರನ್ನು ಮೊದಲನೆ ಆರೋಪಿಗೆ ಪರಿಚಯ ಮಾಡಿಕೊಟ್ಟ ಆರೋಪ ಮಾತ್ರ ಅರ್ಜಿದಾರರ ಮೇಲಿದೆ. ಅವರ ಪಾತ್ರ ಅಷ್ಟಕ್ಕೆ ಸೀಮಿತವಾಗಿದೆ” ಎಂದು ವಿವರಿಸಿದರು.
ವಾದ ಒಪ್ಪದ ನ್ಯಾಯಮೂರ್ತಿಗಳು, ”ನೀವು ಸಹ ಆರೋಪಿಯೇ. ವೈದ್ಯಕೀಯ ಪದವಿ ಸೀಟು ಕೊಡಿಸುವುದಾಗಿ ಅಮಾಯಕರಿಗೆ ನಂಬಿಸಿ ಒಂದೂವರೆ, ಎರಡು ಕೋಟಿ ಪಡೆದು ವಂಚನೆ ಎಸಗಿದ್ದಾರೆ. ಸೀಟು ಆಕಾಂಕ್ಷಿಗಳನ್ನು ಏಕೆ ನೀವು ದಲ್ಲಾಳಿಗೆ ಪರಿಚಯ ಮಾಡಿಕೊಟ್ಟಿರಿ?, ದಲ್ಲಾಳಿಗಳ ಮೂಲಕ ವೈದ್ಯಕೀಯ ಸೀಟು ಕೊಡಿಸುವ ವ್ಯವಹಾರವೇ ಇಂದು ಸಮಾಜದಲ್ಲಿ ಅತಿಘೋರವಾಗಿ ಮಾರ್ಪಟ್ಟಿದೆ” ಎಂದು ಚಾಟಿ ಬೀಸಿದರು.
ಜತೆಗೆ, ”ಅರ್ಜಿದಾರನ ಯಾವುದೇ ಸಣ್ಣ ಪಾತ್ರ ಇರುವುದು ಕಂಡುಬಂದರೂ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ. ಸಮಾಜದಲ್ಲಿ ಸ್ವಲ್ಪವಾದರೂ ಬದಲಾವಣೆ ಆಗಬೇಕು. ವೈದ್ಯಕೀಯ ಸೀಟು ಕೊಡಿಸುವುದಾಗಿ ತಿಳಿಸಿ ಒಂದೂವರೆ, ಎರಡು ಕೋಟಿ ಪಡೆಯೋದೆಲ್ಲಾ ಏನ್ರಿ? ನೀವು ದಲ್ಲಾಳಿಯನ್ನು ಪರಿಚಯ ಮಾಡಿಸಿಕೊಟ್ಟಿರುವುದು ನಿಜವಲ್ಲವೇ? ಹಾಗಾದರೆ ನಿಮಗೆ ದಲ್ಲಾಳಿ ಗೊತ್ತು ಎಂದರ್ಥವಲ್ಲವೇ? ಅದರಲ್ಲಿ ಯಾವುದೇ ಸಂದೇಹ ಇಲ್ಲ ಬಿಡಿ. ಪ್ರಕರಣದಲ್ಲಿ ಮತ್ತೇನು ಇದೆ. ಇಂತಹ ಘಟನೆಗಳು ನಡೆಯಬಾರದು” ಎಂದು ತಿಳಿಸಿ, ಅರ್ಜಿ ವಜಾಗೊಳಿಸಲು ಮುಂದಾದರು.
ಅಂತಿಮವಾಗಿ ಅರ್ಜಿದಾರ ಪರ ವಕೀಲರು, ಅರ್ಜಿ ಹಿಂಪಡೆಯಲಾಗುವುದು. ಪ್ರಕರಣದಲ್ಲಿ ದೋಷಾರೋಪಪಟ್ಟಿ ಸಲ್ಲಿಕೆಯಾದ ಸಂದರ್ಭದಲ್ಲಿ ಆರೋಪಗಳನ್ನು ಕೈಬಿಡಲು ಕೋರಿ ಅರ್ಜಿ ಸಲ್ಲಿಸುವ ಅವಕಾಶವನ್ನು ಮುಕ್ತವಾಗಿರಿಸಬೇಕು ಎಂದು ಕೋರಿ ಅರ್ಜಿ ಹಿಂಪಡೆದರು.
ಪ್ರಕರಣದ ಹಿನ್ನಲೆ: ವೈದ್ಯಕೀಯ ಪದವಿ ಸೀಟು ಕೊಡಿಸುವುದಾಗಿ ತಿಳಿಸಿ ನಗರದ ವಿದ್ಯಾರ್ಥಿ ಮೋಹಿತ್ ರೆಡ್ಡಿ ಹಾಗೂ ಅವರ ತಂದೆಯಿಂದ 2.12 ಕೋಟಿ ರೂ. ಹಣ ಪಡೆದು ವಂಚಿಸಿದ ಆರೋಪ ಸಂಬಂಧ ಮಂಜಪ್ಪ ಹಾಗೂ ಅರ್ಜಿದಾರ ವಿರೂಪಾಕ್ಷ ಸೇರಿದಂತೆ ಆರು ಮಂದಿ ವಿರುದ್ಧ ವಿಶ್ವೇಶ್ವರಪುರ ಪೊಲೀಸ್ ಠಾಣೆಯಲ್ಲಿ 2023ರ ನ.21ರಂದು ಎಫ್ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ದಲ್ಲಾಳಿಯಾದ ಮಂಜಪ್ಪ ಮೊದಲನೇ ಆರೋಪಿಯಾದರೆ, ವಿರೂಪಾಕ್ಷ ಎರಡನೇ ಆರೋಪಿಯಾಗಿದ್ದಾರೆ. ಇದರಿಂದ ತನ್ನ ವಿರುದ್ಧದ ಎಫ್ಐಆರ್ ರದ್ದು ಕೋರಿ ವಿರೂಪಾಕ್ಷ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
(CRL.P 2500/2024)